ಜನಪ್ರಿಯ ಯಕ್ಷಗಾನ ಕಲಾ ಮಂಡಳಿಗೆ 60
ಲೇಖಕರು : ಉದಯವಾಣಿ
ಭಾನುವಾರ, ಜೂನ್ 19 , 2016
|
ಜೂನ್ 12 , 2016
|
ಜನಪ್ರಿಯ ಯಕ್ಷಗಾನ ಕಲಾ ಮಂಡಳಿಗೆ 60
ಮುಂಬೈ :
ಯಕ್ಷಗಾನ ಕಲೆಯನ್ನು ಪರರಾಜ್ಯದಲ್ಲಿ ಪೋಷಿಸಿ, ಬೆಳೆಸಿ, ಮುಂದುರಿಸುವುದು ಸುಲಭ ಸಾಧನೆಯಲ್ಲ. ಮುಂಬೈಯ ಜನಪ್ರಿಯ ಯಕ್ಷಗಾನ ಕಲಾ ಮಂಡಳಿ ಇದನ್ನು ಮಾಡಿ ತೋರಿಸುತ್ತಿದೆ. ಈ ಮಂಡಳಿಗೆ ಈಗ ಅರುವತ್ತರ ಸಂಭ್ರಮ-ಮೆರುಗು.
ಜನಪ್ರಿಯ ಯಕ್ಷಗಾನ ಕಲಾಮಂಡಳಿಯು ಕುಂಬ್ಳೆ ಪುಂಡಲೀಕ್ ನಾಯಕ್, ಎಸ್. ವೆಂಕಟೇಶ್ ಮಲ್ಯ ಮತ್ತಿತರ ಕೆಲ ಕಲಾಪ್ರೇಮಿಗಳೊಂದಿಗೆ ಉಡುಪಿ ಮೂಲದ ಮುಂಬೈಯ ಖ್ಯಾತ ಹೊಟೇಲ್ ಉದ್ಯಮಿ ಕಲಾಪ್ರೇಮಿ ರಾಮ ನಾಯಕ್ ಅವರ ಪೂರ್ಣ ಬೆಂಬಲದೊಂದಿಗೆ ಆರಂಭವಾಯಿತು. ಶ್ರೀ ಕಾಶೀಮಠದ ಶ್ರೀಮತ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರು "ಜನಪ್ರಿಯ ಯಕ್ಷಗಾನ ಕಲಾ ಮಂಡಳಿ' ಎಂಬ ನಾಮಕರಣದೊಂದಿಗೆ ಮಂಡಳಿಯನ್ನು ಶುಭಾರಂಭ ಮಾಡಿ, ಆಶೀರ್ವದಿಸಿದರು. 1956ರಲ್ಲಿ "ಜರಾಸಂಧ ವಧೆ' ಪ್ರಸಂಗದೊಂದಿಗೆ ಪ್ರದರ್ಶನ ಆರಂಭಿಸಿತು.
ಆ ಬಳಿಕ ಹೆಸರಿಗೆ ಅನ್ವರ್ಥವಾಗಿ ಮಂಡಳಿ ಜನಮಾನಸದಲ್ಲಿ ವಿಶೇಷ ಛಾಪು ಪಡಿಮೂಡಿಸಿ, ಜನಪ್ರಿಯತೆಯೆಡೆಗೆ ಸಾಗತೊಡಗಿದರೂ, ವೇಷ-ಭೂಷಣ, ಪರಿಕರಗಳ ಕೊರತೆಯ ಕಷ್ಟ ಎದುರಾಯಿತು. ಆದರೆ ಧೃತಿಗೆಡದೆ ಮುಂಬೈಯ ಇತರ ತಂಡಗಳಿಂದ ಬಾಡಿಗೆಗೆ ಪಡೆದು, ಕೊಂಕಣಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಯಕ್ಷ ಆಖ್ಯಾನ ಪ್ರದರ್ಶಿಸಿ ಕಲಾಸೇವೆಗೈಯಲಾರಂಭಿಸಿತು. ಕೆಲ ಕಾಲದ ಬಳಿಕ ರಾಮನಾಯಕರ ಮುತುವರ್ಜಿಯಿಂದ ಮಂಡಳಿ ಸಂಪೂರ್ಣ ಸ್ವಾವಲಂಬಿಯಾಯಿತು. ಈ ತನಕ ದೇಶದ ವಿವಿಧೆಡೆ ನೂರಾರು ಯಕ್ಷ ಪ್ರದರ್ಶನಗಳನ್ನು ನೀಡಿ ಯಕ್ಷ ಅಭಿಮಾನಿಗಳನ್ನು ರಂಜಿಸಿ ಪ್ರೀತಿಗೆ ಪಾತ್ರವಾಗಿದೆ ಈ ಮಂಡಳಿ.
ಪ್ರಸ್ತುತ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಯಕ್ಷ ಸೇವೆ ನಿಲ್ಲಿಸಿಲ್ಲ. ಮಂಡಳಿಯ ಕಲಾಪ್ರೇಮಕ್ಕೊಂದು ನಿದರ್ಶನವಿದು. ಜನಪ್ರಿಯ ಯಕ್ಷಗಾನ ಕಲಾ ಮಂಡಳಿ ಯಕ್ಷಮಾತೆಯ ಸೇವೆ - ರಂಗದಲ್ಲಿ ಮತ್ತಷ್ಟು ಜನಪ್ರಿಯವಾಗಲಿ. ಭವಿಷ್ಯ ಉಜ್ವಲವಾಗಲಿ.
ಕೃಪೆ :
udayavani
|
|
|